

ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆಯಾಗಿ ಆರು ಮಂದಿ ನಾಪತ್ತೆಯಾದವರಲ್ಲಿ ನಾಲ್ವರ ಮೃತದೇಹ ಪತ್ತೆಯಾಗಿದ್ದು, ಇನ್ನೂ ಇಬ್ಬರ ಸುಳಿವು ಸಿಗದ ಹಿನ್ನೆಲೆಯಲ್ಲಿ ಮತ್ತೆ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಮಂಗಳೂರಿನ ಧಕ್ಕೆ ಅಳಿವೆ ಬಾಗಿಲಿನಲ್ಲಿ ‘ಶ್ರೀರಕ್ಷಾ’ ಎಂಬ ಬೋಟ್ ಸೋಮವಾರ ರಾತ್ರಿ ಮೀನು ಹಿಡಿದುಕೊಂಡು ಧಕ್ಕೆಗೆ ವಾಪಸ್ ಬರುತ್ತಿರುವಾಗ ದುರಂತ ಸಂಭವಿಸಿ 6 ಮೀನುಗಾರರು ನಾಪತ್ತೆಯಾಗಿದ್ದರು. ಈ ಬೋಟ್ನಲ್ಲಿದ್ದ 25 ಮೀನುಗಾರರಲ್ಲಿ 19 ಮಂದಿಯನ್ನು ರಕ್ಷಣೆ ಮಾಡಲಾಗಿತ್ತು. ಕೋಸ್ಟ್ ಗಾರ್ಡ್, ಇತರೆ ಹಡಗಿನ ಮೀನುಗಾರರು ಮತ್ತು ಮುಳುಗು ತಜ್ಞರು ಶೋಧ ಕಾರ್ಯ ನಡೆಸಿ ನಿನ್ನೆ ಇಬ್ಬರ ಮೃತದೇಹ ಹೊರತೆಗೆದಿದ್ದರು. ಪಾಂಡುರಂಗ ಸುವರ್ಣ ಮತ್ತು ಪ್ರೀತಂ ಎಂಬುವರ ಮೃತದೇಹ ನಿನ್ನೆ ಪತ್ತೆಯಾಗಿದ್ದು, ಇಂದು ಚಿಂತನ್ ಮತ್ತು ಅನ್ಸಾರ್ ಎಂಬವರ ಮೃತದೇಹ ಪತ್ತೆಯಾಗಿದೆ. ಝಿಯಾವುಲ್ಲಾ, ಹಸೈನಾರ್ ಎಂಬ ಇಬ್ಬರ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ನಿನ್ನೆ ರಾತ್ರಿ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿದ್ದು, ಇಂದು ಬೆಳಗ್ಗೆಯಿಂದ ಮತ್ತೆ ಕಾರ್ಯಾಚರಣೆ ಆರಂಭವಾಗಿದೆ. ಸಮುದ್ರದೊಳಗೆ ಇರುವ ಬೋಟ್ ಒಳಗಡೆ ಮುಳುಗು ತಜ್ಞರು ಶೋಧ ನಡೆಸಿ, ಮೀನುಗಾರರನ್ನು ಹೊರತರಲು ಪ್ರಯತ್ನಿಸುತ್ತಿದ್ದಾರೆ. ಇವರಿಗೆ ಕೋಸ್ಟ್ ಗಾರ್ಡ್ ಸಿಬ್ಬಂದಿ, ಸ್ಥಳೀಯ ಮೀನುಗಾರರು ಕೈಜೋಡಿಸಿದ್ದಾರೆ.