
ಪುತ್ತೂರು: ಕೆ ಎಸ್ ಆರ್ ಟಿ ಸಿ ಸಾರಿಗೆ ಸೌಲಭ್ಯವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರತೀ 6 ತಿಂಗಳಿಗೊಮ್ಮೆ ಕೆ ಎಸ್ ಆರ್ ಟಿ ಸಿ ಪುತ್ತೂರು ಮತ್ತು ಮಂಗಳೂರು ವಿಭಾಗವನ್ನು ಸೇರಿಸಿ ಪುತ್ತೂರು ನಗರದಲ್ಲಿ ಕೆಎಸ್ಆರ್ಟಿಸಿ ಸಾರಿಗೆ ಅದಲತ್ ನಡೆಸಲಾಗುವುದು. ಅದಾಲತ್ನಲ್ಲಿ ಪ್ರಯಾಣಿಕರಿಂದ ಬಂದ ಸಲಹೆ, ಸೂಚನೆಗಳನ್ನು ಶೇ.85 ರಷ್ಟನ್ನು ಕಾಲ ಮಿತಿಯೊಳಗೆ ಅನುಷ್ಠಾನಗೊಳಿಸಬೇಕು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಕೆ ಎಸ್ ಆರ್ ಟಿ ಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ನಗರದ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಕೆ ಎಸ್ ಆರ್ ಟಿ ಸಿ ಪುತ್ತೂರು ಮತ್ತು ಮಂಗಳೂರು ವಿಭಾಗ ಮಟ್ಟದ ಸಾರಿಗೆ ಅದಾಲತ್ನ ಅಧ್ಯಕ್ಷತೆ ವಹಿಸಿದ್ದರು. ಜನರಿಗೆ ಅವಶ್ಯಕವಾದ ಸ್ಥಳದಲ್ಲಿ ಬಸ್ಗಳಿಗೆ ನಿಲುಗಡೆ ನೀಡಬೇಕು, ಖಾಸಗಿ ಬಸ್ಗಳು ನಿಲುಗಡೆ ನೀಡುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುತ್ತದೆ. ಕೆ ಎಸ್ ಆರ್ ಟಿ ಸಿ ಶಟಲ್ ಬಸ್ಗಳಲ್ಲೂ ಈ ರೀತಿಯ ಪದ್ಧತಿ ಜಾರಿಗೆ ಬರಬೇಕು ಎಂದರು.
ಕೆ ಎಸ್ ಆರ್ ಟಿ ಸಿಯ ಹೊಸ ಮಾರ್ಗಸೂಚಿಗಳ ಆರಂಭದ ಕುರಿತಂತೆ 130 ಮಾರ್ಗಸೂಚಿಗಳಿಗೆ ಅನುಮತಿ ಕೋರಿ ಸಮಗ್ರ ಪ್ರಾದೇಶಿಕ ಪರವಾನಿಗೆ ಅರ್ಜಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದೆ. ಪುತ್ತೂರು ಕೆ ಎಸ್ ಆರ್ ಟಿ ಸಿ ವಿಭಾಗದಿಂದ ಈಗ ಶೇ.95 ರಷ್ಟು ಬಸ್ಗಳ ಓಡಾಟ ಆರಂಭವಾಗಿದೆ. ತಾಲೂಕಿನ ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ಕಾಸರಗೋಡು ತಾಲೂಕಿನ ಭಾಗದಲ್ಲಿ ಬಸ್ಗಳ ಓಡಾಟದ ವಿಸ್ತರಣೆ ಮಾಡಲು ರೂಟ್ ಸರ್ವೇ ಮೂಲಕ ವರದಿ ತಯಾರಿಸಲಾಗುವುದು ಎಂದು ಪುತ್ತೂರು ವಿಭಾಗ ಸಾರಿಗೆ ಸಂಚಲನಾಧಿಕಾರಿ ಮುರಲೀಧರ ಆಚಾರ್ ಸಭೆಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್, ನಗರಸಭಾ ಅಧ್ಯಕ್ಷ ಕೆ. ಜೀವಂಧರ ಜೈನ್, ಕೆಎಸ್ಆರ್ಟಿಸಿ ಮಂಗಳೂರು ವಿಭಾಗ ನಿಯಂತ್ರಣಾಧಿಕಾರಿ ಅರುಣ್ ಕುಮಾರ್ ಎ.ಎಸ್.ಕೆ ಎಸ್ ಆರ್ ಟಿ ಸಿ ಪುತ್ತೂರು ವಿಭಾಗ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ, ಕೆಎಸ್ಆರ್ಟಿಸಿ ಪುತ್ತೂರು ಘಟಕದ ಸ್ಥಾಪಕ ಇಸ್ಮಾಯಿಲ್ ಉಪಸ್ಥಿತರಿದ್ದರು.