
ಸರಕಾರಿ ಬಸ್ ಪಾಸ್ ಅವ್ಯವಸ್ಥೆ ಖಂಡಿಸಿ ಮತ್ತು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕೆಂದು ಆಗ್ರಹಿಸಿ ಎನ್ಎಸ್ಯುಐ ವತಿಯಿಂದ ನಗರದಲ್ಲಿ `ಕೆಎಸ್ಸಾರ್ಟಿಸಿ ಮಾರ್ಚ್’ ನಡೆಯಿತು.
ಮಂಗಳೂರಿನ ಬಳ್ಳಾಲ್ಬಾಗ್ ಸರ್ಕಲ್ನಿಂದ ಬಿಜೈ ಕೆಎಸ್ಸಾರ್ಟಿಸಿ ಕಚೇರಿಯವರೆಗೆ ರ್ಯಾಲಿ ನಡೆಸಿದ ಎನ್ಎಸ್ಯುಐ ಸದಸ್ಯರು ವಿದ್ಯಾರ್ಥಿಗಳ ಬಸ್ ಪಾಸ್ ವಿಷಯಕ್ಕೆ ಸಂಬಂಧಿಸಿ ರಾಜ್ಯ ಸರಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು. ಈ ವೇಳೆ ಮಾತನಾಡಿದ ಎನ್ಎಸ್ಯುಐ ರಾಜ್ಯ ಕಾರ್ಯದರ್ಶಿ ಫಾರೂಕ್ ಬಯಬೆ, `ಕಳೆದ ಕೆಲವು ತಿಂಗಳಿನಿಂದ ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ವ್ಯವಸ್ಥೆಯನ್ನು ಸರಕಾರ ಸ್ಥಗಿತಗೊಳಿಸಿದೆ. ಜಿಲ್ಲೆಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳಂತೂ ಇದರಿಂದ ತೊಂದರೆಗೊಳಗಾಗಿದ್ದಾರೆ. ಸರಕಾರ ಪೊಳ್ಳು ಭರವಸೆ ನೀಡಿ ವಿದ್ಯಾರ್ಥಿಗಳನ್ನು ವಂಚಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಎನ್ಎಸ್ಯುಐ ದ.ಕ .ಜಿಲ್ಲಾಧ್ಯಕ್ಷ ಸವಾದ್ ಸುಳ್ಯ, ಮುಖಂಡರಾದ ಅನ್ವಿತ್ ಕಟೀಲ್, ಶೌನತ್ ರೈ, ಆಶಿಕ್ ಅರಂತೋಡು, ಶಫೀಕ್, ಅಫ್ಸಾನ್ ಶೇಖ್ ಮತ್ತಿತರರು ಪಾಲ್ಗೊಂಡಿದ್ದರು.