
ಪಡುಬಿದ್ರಿ: ಕಡಲತೀರದ ಹೆಜಮಾಡಿ-ಪಡುಬಿದ್ರಿ ಗಡಿಭಾಗದಲ್ಲಿ ಸರ್ಕಾರಿ ಸ್ಥಳದಲ್ಲಿದ್ದ ಗಾಳಿ ಮರಗಳನ್ನು ಅಕ್ರಮವಾಗಿ ಕಡಿಯುತ್ತಿದ್ದು, ಮಾಹಿತಿಯ ಮೇರೆಗೆ ಸ್ಥಳಕ್ಕೆ ದಾಳಿ ಮಾಡಿದ ಅರಣ್ಯ ಅಧಿಕಾರಿಗಳ ತಂಡ ಕಡಿದ ಮರಗಳು ಸಹಿತ ಅದನ್ನು ಕಳ್ಳ ಸಾಗಾಟ ನಡೆಸಲು ಸ್ಥಳಕ್ಕೆ ತಂದಿದ್ದ ಹೆಜಮಾಡಿಯ ವಾಹನವೊಂದನ್ನು ಅರಣ್ಯಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಅರಣ್ಯಧಿಕಾರಿ ನಾಗೇಶ್ ಬಿಲ್ಲವ ನೇತೃತ್ವದ ತಂಡ ಹೆಜಮಾಡಿ-ಪಡುಬಿದ್ರಿ ಸಂಪರ್ಕ ಸೇತುವೆ ನಿರ್ಮಾಣದ ಬಳಿಯಲ್ಲಿದ್ದ ಗಾಳಿ ಮರದ ಹಾಡಿಯೊಂದಕ್ಕೆ ದಾಳಿ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬೃಹತ್ ಹಾಡಿಯಲ್ಲಿ ಸರಿ ಸುಮಾರು ಅರ್ವತ್ತಕ್ಕೂ ಅಧಿಕ ಮರಗಳು ಮರಗಳ್ಳರ ಆಯುಧಕ್ಕೆ ಬಲಿಯಾಗಿದೆ. ಈ ಕೃತ್ಯದಲ್ಲಿ ಸ್ಥಳೀಯರ ಪಾತ್ರ ಇದೆ ಎನ್ನಲಾಗಿದೆಯಾದರೂ ಅವರ್ಯಾರು ಎಂಬುದು ಸ್ಪಷ್ಟವಾಗಿಲ್ಲ. ಈ ಕೃತ್ಯಕ್ಕೆ ಬಳಸಲಾದ ವಾಹನ ಕೂಡಾ ಹೆಜಮಾಡಿಯ ವ್ಯಕ್ತಿಯೋರ್ವರಿಗೆ ಸೇರಿದ್ದಾಗಿದ್ದು, ಹಳೆಯ ವಾಹನ ಇದಾಗಿದ್ದರೂ ನಂಬರ್ ಪ್ಲೇಟ್ಗಳೇ ಇಲ್ಲದೆ, ಇದ್ದ ನಂಬರನ್ನೂ ಅಳಿಸಿ ಹಾಕುವ ಪ್ರಯತ್ನ ನಡೆಸಿರುವುದು ಬೆಳಕಿಗೆ ಬಂದಿದೆ. ಇಂಥಹ ಕೃತ್ಯಗಳಿಗೆ ಬಳಸಳೋ ಎಂಬಂತ್ತೆ ನಿರ್ಮಿಸಲಾದ ಆ ವಾಹನವನ್ನು ವಶಕ್ಕೆ ಪಡೆದುಕೊಂಡ ಅಧಿಕಾರಿಗಳು, ಅದರಲ್ಲೇ ಮರದ ತುಂಡುಗಳನ್ನು ಕಾಪುವಿನ ತಮ್ಮ ಕಛೇರಿಗೆ ಸಾಗಿಸಿದ್ದಾರೆ.
ವರದಿ: ಸುರೇಶ್ ಎರ್ಮಾಳ್ ಪಡುಬಿದ್ರಿ