
ಉಳ್ಳಾಲ ನಗರಸಭೆಯನ್ನು ರಾಜ್ಯದಲ್ಲೇ ಮಾದರಿ ನಗರಸಭೆಯಾಗಿ ರೂಪಿಸುವ ನಿಟ್ಟಿನಲ್ಲಿ ಯೋಜನೆಯನ್ನು ಹಾಕಿಕೊಂಡಿದ್ದು, ಸುಮಾರು 61 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು ಇದರಲ್ಲಿ 57 ಕೋಟಿ ರೂ ಕಾಮಗಾರಿ ಪ್ರಗತಿಯಲ್ಲಿದ್ದು, ನಾಲ್ಕು ಕೋಟಿ ರೂ ಬಿಡುಗಡೆಯಾಗಲಿದೆ ಎಂದು ಶಾಸಕ ಯು. ಟಿ. ಖಾದರ್ ತಿಳಿಸಿದರು.
ತೊಕ್ಕೊಟ್ಟು ಕ್ಲಿಕ್ ಹಾಲ್ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಳೆದ ಎರಡು ವರ್ಷಗಳಿಂದ ಉಳ್ಳಾಲ ನಗರಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳು ಆಡಳಿತದಲ್ಲಿರಲಿಲ್ಲ. ಇದೀಗ ನೂತನ ಅಧ್ಯಕ್ಷ ಉಪಾಧ್ಯಕ್ಷರು ಆಯ್ಕೆಯಾಗಿದ್ದು, ನೂತನ ಆಡಳಿತದಲ್ಲಿ ಉಳ್ಳಾಲ ನಗರಸಭೆಯನ್ನು ಮಾದರಿ ನಗರಸಭೆಯಾಗಿ ರೂಪಿಸಲು ಜನಪ್ರತಿನಿಧಿಗಳು, ಅಧಿಕಾರಿಗಳನ್ನೊಳಗೊಂಡ ತಂಡ ಸಿಧ್ಧವಾಗಿದ್ದು ಈಗಾಗಲೇ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು. ಉಳ್ಳಾಲದಲ್ಲಿ ಕರ್ನಾಟಕ ಸರಕಾರದ ಅಲ್ಪ ಸಂಖ್ಯಾತ ನಿಗಮದಿಂದ 3.5 ಕೋಟಿ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ನಗರಾಭಿವೃದ್ಧಿ ಯೋಜನೆಯಿಂದ 25 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಪ್ರಮುಖ ರಸ್ತೆಗಳ ಅಭಿವೃದ್ಧಿ ನಡೆಯುತ್ತಿದ್ದು ಶೇ. 75 ಕಾಮಗಾರಿ ಪೂರ್ಣಗೊಂಡಿದೆ. ಉಳ್ಳಾಲ ರಾಜಮಾರ್ಗ ಅಭಿವೃದ್ಧಿ ಅಬ್ಬಕ್ಕ ಸರ್ಕಲ್ ಆಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಚತುಷ್ಫತ ರಸ್ತೆ ನಿರ್ಮಾಣವಾಗಿದೆ. ಈ ನಡುವೆ ರಸ್ತೆ ಬದಿಯ ಸುಂದರೀಕರಣ, ಮುಕ್ಕಚ್ಚೇರಿಯಲ್ಲಿ ಮಹಿಳೆಯರಿಗೆ ಪ್ರತ್ಯೇಕ ಪಾರ್ಕ್, ಮತ್ತು ಸಾರ್ವಜನಿಕ ಪಾಕ್ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 14 ಮತ್ತು 15ನೇ ಹಣಕಾಸು ನಿಧಿಯಡಿ 4 ಕೋಟಿ ಬಿಡುಗಡೆಯಾಗಿದೆ. ಕಾನೂನು ತೊಡಕುಗಳಿಂದ ಸ್ಥಗಿತವಾಗಿದ್ದ ಒಳಚರಂಡಿ ಕಾಮಗಾರಿಗೆ ಚಾಲನೆ ನೀಡಿದ್ದು, ಕರಾವಳಿಯಲ್ಲಿ ಕಡಲ್ಕೊರೆತಕ್ಕೆ ಶಾಶ್ವತ ಕಾಮಗಾರಿಯಾಗಿರುವ ಪ್ರದೇಶ ಉಳ್ಳಾಲವಾಗಿದ್ದು, ಮುಂದಿನ ದಿನಗಳಲ್ಲಿ ಬೀಚ್ ಪ್ರವಾಸೋದ್ಯಮಕ್ಕೆ ಯೋಜನೆ ರೂಪಿಸಲಾಗುವುದು ಎಂದರು.ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡ ಈಶ್ವರ ಉಳ್ಳಾಲ್, ಉಳ್ಳಾಲ ನಗರಸಭಾ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್, ಉಪಾಧ್ಯಕ್ಷ ಅಯ್ಯುಬ್ ಮಂಚಿಲ, ಸದಸ್ಯರಾದ ಬಾಝಿಲ್ ಡಿ.ಸೋಜ, ಯು.ಎ. ಇಸ್ಮಾಯಿಲ್, ಇಬ್ರಾಹಿಂ ಅಶ್ರಫ್, ಭಾರತಿ, ವೀಣಾ ಡಿ.ಸೋಜ, ಸಪ್ಮಾ ಹರೀಶ್, ಶಶಿಕಲಾ, ದೀಕ್ಷಿತಾ, ಕಮರುನ್ನೀಸಾ, ಕಾಂಗ್ರೆಸ್ ಮುಖಂಡ ಆಸೀಫ್ ಅಂಬಟಡಿ ಮತ್ತಿತರರು ಉಪಸ್ಥಿತರಿದ್ದರು.