
ಕಾಪುವಿನ ಇತಿಹಾಸ ಪ್ರಸಿದ್ಧ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರ ಪ್ರಯುಕ್ತ ಕಾಪು ಮಜೂರಿನ ಹಳೇ ಸರಕಾರಿ ಕಾಲೇಜಿನ ಆವರಣದಲ್ಲಿ ನೂತನ ಗರ್ಭಗುಡಿಗೆ ಹಾಗೂ ಉಚ್ಚಂಗಿ ಅಮ್ಮನ ಗುಡಿಗೆ ಬುಧವಾರ ಬೆಳಿಗ್ಗೆ ಶಿಲಾ ಮೂಹೂರ್ತ ನೆರವೇರಿತು. ಕಾಪು ಹೊಸ ಮಾರಿಯಮ್ಮ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಜೂರಿನಲ್ಲಿ ಶಿಲಾ ಮೂಹೂರ್ತ ನೆರವೇರಿಸಲಾಯಿತು.ವೇದ ಮೂರ್ತಿ ಕುಮಾರ ಗುರು ತಂತ್ರಿ ಹಾಗೂ ಶ್ರೀನಿವಾಸ ತಂತ್ರಿವರ್ಯರ ನೇತೃತ್ವದಲ್ಲಿ ಶಿಲಾ ಮೂಹೂರ್ತದ ಪೂಜಾ ವಿಧಿವಿಧಾನ ಸಂಪನ್ನ ಗೊಂಡಿತು.
ಈ ಸಂದರ್ಭ ಜೀಣೋದ್ಧಾರ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ ಮಾತನಾಡಿ, ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯಿಂದ ಕಾಪು ಹೊಸ ಮಾರಿಗುಡಿಯನ್ನು ಸಮಗ್ರ ಜೀರ್ಣೋದ್ಧಾರ ಮಾಡುವುದೆಂದು ನಿಶ್ಚಯಿಸಿದ್ದೇವೆ. ಈ ಬಗ್ಗೆ ಕೆಲ ವರ್ಷಗಳ ಹಿಂದೆಯೇ ಶಿಲಾನ್ಯಾಸ ಹಾಗೂ ಷಡಾಧಾರ ಪ್ರಕ್ರಿಯೆ ಜರಗಿತ್ತು. ಸರಕಾರದ ಅನುಮೋದನೆ ಸಿಗುವಾಗ ವೀಳಂಬ ಆದುದರಿಂದ ಸ್ವಲ್ಪ ತಡವಾಗಿ ಶಿಲಾ ಮೂಹೂರ್ತ ನೆರವೇರಿಸುತ್ತಿದ್ದೇವೆ. ಈ ಸಂದರ್ಭ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ಸುಧಾಮ ಶೆಟ್ಟಿ, ಪುರಸಭಾಧ್ಯಕ್ಷ ಅನಿಲ್ ಕುಮಾರ್, ನಡಿಕೆರೆ ರತ್ನಾಕರ ಹೆಗ್ಡೆ, ದೇವಳದ ಆಡಳಿತಾಧಿಕಾರಿ ಪ್ರಶಾಂತ್ ಶೆಟ್ಟಿ, ಗೋವರ್ಧನ ಶೇರಿಗಾರ ಮತ್ತಿತರರು ಉಪಸ್ಥಿತರಿದ್ದರು.