

ಗ್ರಾ.ಪಂ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಮದರಸ ಧಾರ್ಮಿಕ ಗುರುಗಳಿಗೆ ತಂಡವೊಂದು ಸುತ್ತಿಗೆಯಲ್ಲಿ ತಲೆಗೆ ಬಡಿದು ಕೊಲೆಗೆ ಯತ್ನಿಸಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ಅಸೈಗೋಳಿಯಲ್ಲಿ ಶನಿವಾರ ತಡರಾತ್ರಿ ವೇಳೆ ಸಂಭವಿಸಿದೆ.
ಅಸೈಗೋಳಿ ನಿವಾಸಿ ಹನೀಫ್ ನಿಜಾಮಿ (40) ಕೊಲೆಯತ್ನಕ್ಕೆ ಒಳಗಾದವರು. ಇವರಿಗೆ ಅಸೈಗೋಳಿ ನಿವಾಸಿ ಕಾಂಗ್ರೆಸ್ ಕಾರ್ಯಕರ್ತ ಕರೀಂ ನೇತೃತ್ವದ ತಂಡ ಕೃತ್ಯ ಎಸಗಿರುವುದಾಗಿ ಆರೋಪಿಸಲಾಗಿದೆ. ಹನೀಫ್ ನಿಜಾಮಿ ಉಪ್ಪಳ, ಮಂಜೇಶ್ವರ, ಪೈವಳಿಕೆ ಹಾಗೂ ಮಂಜನಾಡಿ ಭಾಗಗಳಲ್ಲಿ ಗ್ರಾ.ಪಂ ಚುನಾವಣೆ ಹಿನ್ನೆಲೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾವಚಿತ್ರಗಳು ವೈರಲ್ ಆಗಿತ್ತು. ಜತೆಗೆ ತಮ್ಮ ಮನೆಯಿರುವ ಮಂಜನಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಈ ಹಿಂದೆ ಕಾಂಗ್ರೆಸ್ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುತ್ತಿದ್ದರು. ಆದರೆ ಈ ಬಾರಿ ನಾಲ್ಕು ಬಿಜೆಪಿ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಅವರ ಪರ ಪ್ರಚಾರ ಕಾರ್ಯದಲ್ಲಿ ನಿಜಾಮಿ ಭಾಗವಹಿಸಿದ್ದರು. ಇದೇ ದ್ವೇಷದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೊಲೆಗೆ ಯತ್ನಿಸಿರುವುದಾಗಿ ಬಿಜೆಪಿ ಅಲ್ಪಸಂಖ್ಯಾತ ಘಟಕದ ಮುಖಂಡ ಫಝಲ್ ಅಸೈಗೋಳಿ ಆರೋಪಿಸಿದ್ದಾರೆ.