
ಮೂಡುಬಿದಿರೆ : ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರು ನಮಗೆ ಶಿಕ್ಷಣ, ಸಂಘಟನೆ, ಹೋರಾಟದ ಮನೋಭಾವಕ್ಕೆ ಮಾರ್ಗದರ್ಶನವನ್ನು ಹಾಕಿ ಹೋಗಿದ್ದಾರೆ. ಸಮುದಾಯದಲ್ಲಿ ಹಲವು ಪ್ರತಿಭೆಗಳಿವೆ, ತುಂಬಾ ಜನ ಕೆಲಸ ಮಾಡುವವರಿದ್ದಾರೆ ಆದರೆ ಆರ್ಥಿಕವಾಗಿ ಪರಿವರ್ತಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಪ್ರತಿಷ್ಠೆ, ನಾಯಕತ್ವಕ್ಕಾಗಿ ನಾವು ಕೆಲಸ ಮಾಡದೆ ಸಮುದಾಯದ ಅಭಿವೃದ್ಧಿಗಾಗಿ ನಾವು ಯುವಸೇನೆಯ ಮೂಲಕ ಕೆಲಸ ಮಾಡಬೇಕಾಗಿದೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕøತ ಚಲನಚಿತ್ರ ನಟ ಮೋಹನ್ ಶೇಣಿ ಹೇಳಿದರು.
ಅವರು ಭಾರತರತ್ನ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನ ಹಾಗೂ ಶ್ರೀ ಸತ್ಯಸಾರಮಾನಿ ಯುವ ಸೇನೆ, ಕೇಂದ್ರ ಸಮಿತಿ ಮೂಡುಬಿದಿರೆ ಇದರ ಲೋಕಾರ್ಪಣೆ ಕಾರ್ಯಕ್ರಮವನ್ನು ಭಾನುವಾರ ಸ್ವರ್ಣ ಮಂದಿರದಲ್ಲಿ ಉದ್ಘಾಟಿಸಿ ಮಾತನಾಡಿದರು. ಒಳ್ಳೆಯ ಉದ್ದೇಶವನ್ನಿಟ್ಟುಕೊಂಡು ನಾವು ಕೆಲಸ ಮಾಡಿದಾಗ ಹಿರಿಯರೂ ಖುಷಿ ಪಡುತ್ತಾರೆ ಎಂದ ಅವರು ಬೆವರ ಹರಿಸಿ ದುಡಿಯುವ ಜನ ನಾವು ನಮ್ಮ ಬೆವರ ಹನಿಯ ಪಾಲನ್ನು ಕೇಳಲು ತಲೆ ಬಾಗುವುದು ಬೇಡ ಎಂದು ಕಿವಿ ಮಾತನ್ನು ಹೇಳಿದರು.
ಶ್ರೀ ಸತ್ಯಸಾರಮಾನಿ ಯುವಸೇನೆ ಇದರ ಅಧ್ಯಕ್ಷ ಸುರೇಶ್ ಪಿ.ಬಿ ಅಧ್ಯಕ್ಷತೆ ವಹಿಸಿದ್ದರು. ರಂಗನಟ”ಶಿವದೂತೆ ಗುಳಿಗೆ” ಖ್ಯಾತೀಯ ವಿನೋದ್ ರಾಜ್ ಕೋಕಿಲ, ಬೆಳ್ತಂಗಡಿ ಯುವಸಂಕಿರಣದ ಅಧ್ಯಕ್ಷ ಲಕ್ಷ್ಮಣ್ ಜಿ.ಎಸ್., ನ್ಯಾಯವಾದಿ ಪ್ರಮೀಳ, ಶ್ರೀ ಸತ್ಯಸಾರಮಾನಿ ಯುವಸೇನೆಯ ಪ್ರಧಾನ ಕಾರ್ಯದರ್ಶಿ ಉದಯ ಗೋಳಿಯಂಗಡಿ, ಖಜಾಂಜಿ ರಾಜೇಶ್ ನೆತ್ತೋಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.